ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ವಿದ್ವಾನ್ ಪೆರ್ಲ ಕಷ್ಣ ಭಟ್ ನಿಧನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಸೆಪ್ಟೆ೦ಬರ್ 3 , 2013
ಯಕ್ಷಗಾನದ ಅರ್ಥಗಾರಿಕೆ, ಸಾಹಿತ್ಯ, ನಾಟಕ, ಸಾರ್ವಜನಿಕ ಸೇವೆ, ಅಧ್ಯಾಪನವೇ ಮೊದಲಾದ ಅನೇಕ ಚಟುವಟಿಕೆಗಳಲ್ಲಿ ನಿರಂತರ ಸೇವೆ ಸಲ್ಲಿಸಿದ ಬಹುಮುಖಿ ವ್ಯಕ್ತಿತ್ವದ ಹಿರಿಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ (90) ಸೋಮವಾರ ವಯೋ ಸಹಜ ಅನಾರೋಗ್ಯದಿಂದ ಪೆರ್ಲದ ಸ್ವಗಹದಲ್ಲಿ ನಿಧನರಾದರು.

1923 ಮೇ 16ರಂದು ಪಡ್ರೆಯಲ್ಲಿ ಜನಿಸಿದ ಅವರು ಸಂಸ್ಕೃತದಲ್ಲಿ ವಿದ್ವಾನ್, ಹಿಂದಿ ರಾಷ್ಟ್ರಭಾಷಾ ಪ್ರವೀಣ, ಆಂಗ್ಲ ಭಾಷೆಯಲ್ಲಿ ಇಂಟರ್‌ಮೀಡಿಯೇಟ್ ಶಿಕ್ಷಣ ಪಡೆದಿದ್ದರು. ತಂದೆ ಪಡ್ರೆ ಗುರು ಶ್ರೀಪತಿ ಶಾಸ್ತ್ರಿ ಹಾಗೂ ತಾಯಿ ನೇತ್ರಾವತಿ ಅವರ ಸಾಧನೆಗೆ ಬೆಂಬಲವಾದವರು.

ತಮ್ಮ ಪ್ರಾಥಮಿಕ ವಿದ್ಯಾಬ್ಯಾಸವನ್ನು ಪೆರ್ಲದಲ್ಲಿಯೂ, ಸಂಸ್ಕೃತ ವಿದ್ಯಾಭ್ಯಾಸವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿಯೂ ಮಾಡಿದರು. ನಂತರ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ 7 ವರ್ಷದ ಅಧ್ಯಯನ ಜತೆಗೆ ಹಿಂದಿ ಪ್ರವೀಣ. ಒಂದು ವರ್ಷಗಳ ಕಾಲ ಮಂಗಳೂರು ಕೆನರಾ ಪ್ರೌಢ ಶಾಲೆಯಲ್ಲಿ ಹಿಂದಿ ಪಂಡಿತರಾಗಿಯೂ ನಂತರ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಸುಮಾರು 31 ವರ್ಷಗಳ ಕಾಲ ಹಿಂದಿ ಶಿಕ್ಷಕರಾಗಿ ಅಧ್ಯಾಪಕ ವೃತ್ತಿ ನಡೆಸಿದ್ದರು. ರಾಜ್ಯೋತ್ಸವ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವ ಪಡೆದಿರುವ ಅವರಿಗೆ ಕೇರಳ ಸರಕಾರದಿಂದಲೂ ಪ್ರಶಸ್ತಿ ಲಭಿಸಿತ್ತು.

ಕೃಷ್ಣ ಭಟ್ಟರು ಕಾಸರಗೋಡು ಏಕೀಕರಣಕ್ಕಾಗಿ ನಡೆದ ಚಳವಳಿಗಳಲ್ಲಿ ಸಕ್ರಿಯವಾಗಿದ್ದರು. ಏಕೀಕರಣದ ಮಹತ್ವ ಮತ್ತು ಅವಶ್ಯಕತೆಗಳ ಬಗ್ಗೆ ಜನತೆಗೆ ತಿಳಿಸಲು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಹಿತ್ಯ ಚಟುವಟಿಕೆಗಳ ಮೂಲಕ ಕನ್ನಡದ ಬಗ್ಗೆ ಕಳಕಳಿ ಮೂಡಿಸಲು ಪ್ರಯತ್ನಿಸಿದ್ದರು. ಅವರು ಮಹಾಜನ್ ಆಯೋಗದ ವರದಿಯನ್ನು ಜಾರಿಗೊಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟರು.

ಜತೆಯಲ್ಲೇ ಇದ್ದ ಯಕ್ಷಗಾನದ ಆಸಕ್ತಿಯಿಂದಾಗಿ ಕುಬಣೂರು ಬಾಲಕೃಷ್ಣ ರಾಯರ ತಾಳಮದ್ದಳೆ ತಂಡದಲ್ಲಿ ತಿರುಗಾಟ, ಅಪ್ರತಿಮ ವಾಕ್ಚಾತು ರ್ಯದ ಪ್ರತಿರೂಪವಾದ ಕೃಷ್ಣ ಭಟ್ಟರಲ್ಲಿ ಕೃಷ್ಣ, ರಾಮ, ಅತಿಕಾಯ, ವಿಭೀಷಣ, ಬೃಹನ್ನಳೆ ಪಾತ್ರಗಳು ಬಹಳಷ್ಟು ಪಳಗಿವೆ. ಪಂಡಿತರೂ, ಕಲಾವಿದರೂ ಆದ ಪೆರ್ಲ ಕೃಷ್ಣ ಭಟ್ಟರು ಪ್ರಬುದ್ಧ ಲೇಖಕರೂ ಹೌದು. ಕಿರಾತಾರ್ಜುನೀಯ (ಅನುವಾದ), ಪಾದುಕಾ ಪ್ರದಾನ (ನಾಟಕ), ತಾಳಮದ್ದಳೆ (ಪ್ರಹಸನ), ಭಗವಾನ್ ಪರಶುರಾಮ (ಅನುವಾದ), ಜಾತ್ರೆ ಮತ್ತು ಇತರ ಕಥೆಗಳು (ಅನುವಾದ), ಭಗವಾನ್ ಬುದ್ಧ (ಜೀವನ ಚರಿತ್ರೆ), ಮಹಾಭಾರತ ಉಪಖ್ಯಾನಗಳು (ಕಥಾ ಸಂಕಲನ), ಕಲಾ ತಪಸ್ವಿ (ಸಂಪಾದಿತ ಸಂಸ್ಕರಣಾ ಗ್ರಂಥ), ಮಧೂರು ಶ್ರೀ ಸಿದ್ಧಿವಿನಾಯಕ ಸುಪ್ರಭಾತಂ (ಸಂಸ್ಕೃತ), ಶರವು ಮಹಾಗಣಪತಿ ಸುಪ್ರಭಾತ (ಕನ್ನಡ), ಮಂಜುನಾಥೇಶ್ವರ ಸುಪ್ರಭಾತಂ(ಸಂಸ್ಕೃತ), ಋಗ್ವೇದೀಯ ನಿತ್ಯಕರ್ಮ ವಿಧಿ (ಮೂಲ ಸಂಸ್ಕೃತ-ಕನ್ನಡ ಅನುವಾದ ಸಹಿತ), ಸತ್ಯನಾರಾಯಣ ಪೂಜಾ ವಿಧಿ (ಸಂಪಾದಿತ ಕನ್ನಡ ಅರ್ಥವಿವರ ಸಹಿತ), ಸಾರ್ಥ ಶೋಡಷ ಸಂಸ್ಕಾರ ರತ್ನಮಾಲಾ (ಮೂಲ ಸಂಸ್ಕೃತ ಹಾಗೂ ಕನ್ನಡ ಅರ್ಥಸಹಿತ) ಇವರು ಬರೆದ ಕೃತಿಗಳು. ಇವರು ಬರೆದ ಕಿರಾತಾರ್ಜುನೀಯ ಕಥೆ, ಪಾದುಕಾ ಪ್ರದಾನ, ಭಗವಾನ್ ಬುದ್ಧ, ಮಹಾಭಾರತ ಉಪಖ್ಯಾನಗಳು, ಜಾತ್ರೆ ಮತ್ತು ಇತರ ಕಥೆಗಳು ಕೇರಳ ಸರ್ಕಾರದಿಂದ ಪಠ್ಯ ಪುಸ್ತಕಕ್ಕಾಗಿ ಆಯ್ಕೆಯಾಗಿವೆ.

ಪೆರ್ಲದಂತಹ ಗ್ರಾಮೀಣ ಪ್ರದೇಶಕ್ಕೆ ಶೆಕ್ಷಣಿಕವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೃಷ್ಣ ಭಟ್ಟರ ಕೊಡುಗೆ ಬಹಳಷ್ಟಿದೆ. ಪೆರ್ಲದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕೃಷ್ಣ ಭಟ್ಟರ ನಿರ್ದೇಶನದಿಂದ ಶಕ್ತವಾಗಿದೆ. ಯಕ್ಷಗಾನ ಕೇಂದ್ರಗಳು, ಮಂದಿರ ನಿರ್ಮಾಣ, ಹಳ್ಳಿಭಜನೆ, ಶಿಕ್ಷಣ ಮಾಧ್ಯಮಗಳು ಇವರ ಸಮರ್ಥ ವ್ಯವಸ್ಥಾಪಕತ್ವದಲ್ಲಿ ಬೆಳೆದುಬಂದಿವೆ. ಅನೇಕ ಸಂಘಟನೆಗಳು ಇವರ ಮಾರ್ಗದರ್ಶನದ ಆಶ್ರಯದಲ್ಲಿ ಸಾಮಾಜಿಕ ಸೇವೆ ಮಾಡುತ್ತಿವೆ. ಪೆರ್ಲ ಕೃಷ್ಣ ಭಟ್ಟರಿಂದಾಗಿ ಬ್ರಿಟಿಷರ ಆಡಳಿತದಲ್ಲೂ ಕನ್ನಡವನ್ನು ಉಳಿಸಿಕೊಂಡಿದ್ದ ಪೆರ್ಲವು ಭಾಷಾ ಸಂಸ್ಕೃತಿಯ ಜತೆಗೆ ಧಾರ್ಮಿಕ, ಶೆಕ್ಷಣಿಕ, ಸರಕಾರಿ, ಸಾಂಸ್ಕೃತಿಕ ವೌಲ್ಯಗಳನ್ನು ಉಳಿಸಿಕೊಂಡಿದೆ. ಭಟ್ ಅವರಿಗೆ ಪತ್ನಿ ಹಾಗೂ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.



ಕೃಪೆ : http://www.vijaykarnataka.com/

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ